ವಯನಾಡ್ ದುರಂತ | 2ನೇ ದಿನವೂ ಭರಾಟೆಯ ರಕ್ಷಣಾ ಕಾರ್ಯಾಚರಣೆ
ಕೆ.ಪಿ. ನಾಗರಾಜ್ ವಯನಾಡ್ (ಮೇಪ್ಪಾಡಿ): ಕೇರಳದ ವಯನಾಡ್ ಜಿಲ್ಲೆಯ ಮೇಪ್ಪಾಡಿ ಸಮೀಪದ ಕಳ್ಳಾಡಿಯಲ್ಲಿ ನಿರ್ಮಾಣ ಹಂತದಲ್ಲಿರುವ ಅನಕ್ಕಂಪೊಯಿಲ್–ಕಳ್ಳಾಡಿ–ಮೇಪ್ಪಾಡಿ ಸುರಂಗ ರಸ್ತೆ ಯೋಜನೆ ಕಾಮಗಾರಿ ಪ್ರದೇಶದಲ್ಲಿ ಸಂಭವಿಸಿದ ಭೂಕುಸಿತದ ನಂತರ ಎರಡನೇ ದಿನವೂ ರಕ್ಷಣಾ ಕಾರ್ಯಾಚರಣೆ ತೀವ್ರವಾಗಿ ಮುಂದುವರಿದಿದೆ. ಮಣ್ಣು ಮತ್ತು ಬಂಡೆಗಳಡಿ ಸಿಲುಕಿರುವವರನ್ನ ಜೀವಂತವಾಗಿ ಪತ್ತ

ಕೆ.ಪಿ. ನಾಗರಾಜ್ ವಯನಾಡ್ (ಮೇಪ್ಪಾಡಿ): ಕೇರಳದ ವಯನಾಡ್ ಜಿಲ್ಲೆಯ ಮೇಪ್ಪಾಡಿ ಸಮೀಪದ ಕಳ್ಳಾಡಿಯಲ್ಲಿ ನಿರ್ಮಾಣ ಹಂತದಲ್ಲಿರುವ ಅನಕ್ಕಂಪೊಯಿಲ್–ಕಳ್ಳಾಡಿ–ಮೇಪ್ಪಾಡಿ ಸುರಂಗ ರಸ್ತೆ ಯೋಜನೆ ಕಾಮಗಾರಿ ಪ್ರದೇಶದಲ್ಲಿ ಸಂಭವಿಸಿದ ಭೂಕುಸಿತದ ನಂತರ ಎರಡನೇ ದಿನವೂ ರಕ್ಷಣಾ ಕಾರ್ಯಾಚರಣೆ ತೀವ್ರವಾಗಿ ಮುಂದುವರಿದಿದೆ. ಮಣ್ಣು ಮತ್ತು ಬಂಡೆಗಳಡಿ ಸಿಲುಕಿರುವವರನ್ನ ಜೀವಂತವಾಗಿ ಪತ್ತೆಹಚ್ಚಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF), ಅಗ್ನಿಶಾಮಕ ದಳ, ಕೇರಳ ಪೊಲೀಸರು, ಆರೋಗ್ಯ ಇಲಾಖೆ, ಸ್ಥಳೀಯ ಆಡಳಿತ ಮತ್ತು ಸ್ವಯಂಸೇವಕರು ಸಮನ್ವಯದಿಂದ ಕಾರ್ಯಾಚರಣೆ ನಡೆಸುತ್ತಿದ್ದಾರೆ. ನಿರಂತರ ಮಳೆ, ಕೆಸರುಮಯ ವಾತಾವರಣ ಮತ್ತು ಮತ್ತೆ ಮಣ್ಣು ಜಾರುವ ಅಪಾಯ ರಕ್ಷಣಾ ಕಾರ್ಯಾಚರಣೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಹಲವು ಸ್ಥಳಗಳಲ್ಲಿ ಭಾರೀ ಯಂತ್ರೋಪಕರಣಗಳ ನೆರವಿನಿಂದ ಮಣ್ಣು ತೆರವುಗೊಳಿಸಲಾಗುತ್ತಿದ್ದರೆ, ಜೀವಂತ ವ್ಯಕ್ತಿಗಳು ಸಿಲುಕಿರುವ ಸಾಧ್ಯತೆ ಇರುವ ಪ್ರದೇಶಗಳಲ್ಲಿ ಅತ್ಯಂತ ಎಚ್ಚರಿಕೆಯಿಂದ ಕೈಯಿಂದಲೇ ಶೋಧ ಕಾರ್ಯ ನಡೆಸಲಾಗುತ್ತಿದೆ. ರಕ್ಷಣಾ ಸಿಬ್ಬಂದಿ ಪ್ರತಿಯೊಂದು ಹಂತದಲ್ಲೂ ಭೂವೈಜ್ಞಾನಿಕ ತಜ್ಞರ ಸಲಹೆಯಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಅಧಿಕೃತ ಮಾಹಿತಿಯ ಪ್ರಕಾರ, ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. ಹಲವರು ಗಾಯಗೊಂಡಿದ್ದು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ ಐವರು ನಾಪತ್ತೆಯಾಗಿದ್ದು, ಅವರಿಗಾಗಿ ಹಗಲಿರುಳು ಶೋಧ ಮುಂದುವರಿದಿದೆ. ರಕ್ಷಣಾ ಕಾರ್ಯಾಚರಣೆ ಪೂರ್ಣಗೊಳ್ಳುವವರೆಗೆ ಸಾವಿನ ಹಾಗೂ ನಾಪತ್ತೆಯಾದವರ ಸಂಖ್ಯೆಯಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ ಎಂದು ಜಿಲ್ಲಾಡಳಿತ ತಿಳಿಸಿದೆ. ದುರಂತಕ್ಕೆ ಕಾರಣವೇನು? ಭೂಕುಸಿತಕ್ಕೆ ನಿಖರ ಕಾರಣ ಇನ್ನೂ ಅಧಿಕೃತವಾಗಿ ದೃಢಪಟ್ಟಿಲ್ಲ. ಆದರೆ ಪ್ರಾಥಮಿಕ ಮಾಹಿತಿಯ ಪ್ರಕಾರ ಕಳೆದ ಹಲವು ದಿನಗಳಿಂದ ಸುರಿದ ಧಾರಾಕಾರ ಮಳೆಯಿಂದ ಬೆಟ್ಟದ ಇಳಿಜಾರು ನೀರನ್ನು ಅತಿಯಾಗಿ ಹೀರಿಕೊಂಡು ದುರ್ಬಲಗೊಂಡಿತ್ತು. ಪರಿಣಾಮವಾಗಿ ಭಾರೀ ಪ್ರಮಾಣದ ಮಣ್ಣು, ಬಂಡೆಗಳು ಮತ್ತು ಮರಗಳು ಏಕಾಏಕಿ ಜಾರಿ ಕಾಮಗಾರಿ ನಡೆಯುತ್ತಿದ್ದ ಪ್ರದೇಶದ ಮೇಲೆ ಬಿದ್ದವು. ಈ ಕುರಿತು ಭೂವಿಜ್ಞಾನಿಗಳು ಮತ್ತು ತಾಂತ್ರಿಕ ತಜ್ಞರಿಂದ ಸಮಗ್ರ ಪರಿಶೀಲನೆ ನಡೆಯುತ್ತಿದೆ. ರಾಜಕೀಯ ಮತ್ತು ಆಡಳಿತಾತ್ಮಕ ಚರ್ಚೆ: ದುರಂತದ ನಂತರ ಈ ಘಟನೆ ರಾಜಕೀಯ ಚರ್ಚೆಗೂ ಕಾರಣವಾಗಿದೆ. ಕೇರಳ ಸರ್ಕಾರದ ಕೆಲವು ಪ್ರತಿನಿಧಿಗಳು, ಕಾಮಗಾರಿ ವೇಳೆ ತೆಗೆಯಲಾದ ಮಣ್ಣನ್ನು ವೈಜ್ಞಾನಿಕ ಕ್ರಮವಿಲ್ಲದೇ ರಾಶಿ ಹಾಕಿರುವುದು ದುರಂತದ ತೀವ್ರತೆಯನ್ನ ಹೆಚ್ಚಿಸಿರಬಹುದು ಎಂದು ಪ್ರಾಥಮಿಕವಾಗಿ ಅಭಿಪ್ರಾಯಪಟ್ಟಿದ್ದಾರೆ. ಆದರೆ ಈ ಹೇಳಿಕೆಗಳು ಇನ್ನೂ ತನಿಖೆಯ ಹಂತದಲ್ಲಿದ್ದು, ಯಾವುದೇ ತೀರ್ಮಾನಕ್ಕೆ ಬರುವ ಮೊದಲು ತಾಂತ್ರಿಕ ವರದಿ ಹಾಗೂ ಅಧಿಕೃತ ತನಿಖೆಯ ಫಲಿತಾಂಶಕ್ಕಾಗಿ ಕಾಯಬೇಕಿದೆ. ಇದೇ ವೇಳೆ ಯೋಜನೆಯ ಗುತ್ತಿಗೆದಾರರು ಹಾಗೂ ಸಂಬಂಧಿತ ಇಲಾಖೆಗಳು ಸುರಕ್ಷತಾ ಕ್ರಮಗಳನ್ನ ಅನುಸರಿಸಲಾಗಿತ್ತು ಎಂದು ಹೇಳಿವೆ. ಹೀಗಾಗಿ ಈ ದುರಂತದ ನಿಖರ ಕಾರಣ, ಕಾಮಗಾರಿಯ ವಿಧಾನ, ಮಳೆ ಮತ್ತು ಭೂವೈಜ್ಞಾನಿಕ ಪರಿಸ್ಥಿತಿಗಳ ಪಾತ್ರದ ಕುರಿತು ತನಿಖೆಯ ನಂತರವೇ ಸ್ಪಷ್ಟ ಚಿತ್ರಣ ದೊರೆಯಲಿದೆ. ಸುರಂಗ ಯೋಜನೆ ಮತ್ತೆ ಚರ್ಚೆಯಲ್ಲಿ: ಅನಕ್ಕಂಪೊಯಿಲ್–ಕಳ್ಳಾಡಿ–ಮೇಪ್ಪಾಡಿ ಸುರಂಗ ರಸ್ತೆ ಯೋಜನೆಯು ಕೇರಳದ ಪ್ರಮುಖ ಮೂಲಸೌಕರ್ಯ ಯೋಜನೆಗಳಲ್ಲಿ ಒಂದಾಗಿದೆ. ಸುಮಾರು 8.75 ಕಿಲೋಮೀಟರ್ ಉದ್ದದ ಈ ಸುರಂಗವು ಕೋಝೀಕೋಡ್ ಮತ್ತು ವಯನಾಡ್ ನಡುವಿನ ಸಂಚಾರವನ್ನು ಸುಗಮಗೊಳಿಸುವ ಉದ್ದೇಶದಿಂದ ನಿರ್ಮಾಣವಾಗುತ್ತಿದೆ. ಘಾಟ್ ರಸ್ತೆಯ ಮೇಲಿನ ವಾಹನ ದಟ್ಟಣೆ ಕಡಿಮೆ ಮಾಡುವುದು, ಮಳೆಗಾಲದಲ್ಲಿಯೂ ಸುರಕ್ಷಿತ ಸಂಚಾರಕ್ಕೆ ಪರ್ಯಾಯ ಮಾರ್ಗ ಕಲ್ಪಿಸುವುದು ಹಾಗೂ ಪ್ರವಾಸೋದ್ಯಮ ಮತ್ತು ವ್ಯಾಪಾರಕ್ಕೆ ಉತ್ತೇಜನ ನೀಡುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಆದರೆ ಭೂಕುಸಿತದ ನಂತರ ಯೋಜನೆಗೆ ನೀಡಲಾದ ಪರಿಸರ ಅನುಮತಿ, ಭೂವೈಜ್ಞಾನಿಕ ಅಧ್ಯಯನ, ಇಳಿಜಾರುಗಳ ಸ್ಥಿರತೆ, ಮಣ್ಣು ನಿರ್ವಹಣೆ ಮತ್ತು ಅಪಾಯ ಮೌಲ್ಯಮಾಪನ ಕುರಿತ ಚರ್ಚೆಗಳು ಮತ್ತೆ ಮುನ್ನೆಲೆಗೆ ಬಂದಿವೆ. ತಜ್ಞರ ಅಭಿಪ್ರಾಯ ಭೂವಿಜ್ಞಾನಿಗಳು ಮತ್ತು ಪರಿಸರ ತಜ್ಞರ ಅಭಿಪ್ರಾಯದಂತೆ, ಪಶ್ಚಿಮ ಘಟ್ಟದಂತಹ ಸೂಕ್ಷ್ಮ ಪ್ರದೇಶಗಳಲ್ಲಿ ಅಭಿವೃದ್ಧಿ ಯೋಜನೆಗಳನ್ನು ನಿಲ್ಲಿಸುವ ಪ್ರಶ್ನೆಯಲ್ಲ. ಆದರೆ ಪ್ರತಿಯೊಂದು ಯೋಜನೆಯೂ ಭೂವೈಜ್ಞಾನಿಕ ಅಧ್ಯಯನ, ಮಳೆ ಮಾದರಿಯ ವಿಶ್ಲೇಷಣೆ, ಇಳಿಜಾರು ಸ್ಥಿರತೆ, ಪರಿಸರ ಸಂರಕ್ಷಣೆ ಮತ್ತು ಕಟ್ಟುನಿಟ್ಟಿನ ಸುರಕ್ಷತಾ ಮಾನದಂಡಗಳ ಆಧಾರದ ಮೇಲೆ ಅನುಷ್ಠಾನಗೊಳ್ಳಬೇಕು. ಹವಾಮಾನ ಬದಲಾವಣೆಯಿಂದ ಅಲ್ಪಾವಧಿಯಲ್ಲಿ ಅಧಿಕ ಪ್ರಮಾಣದ ಮಳೆ ಸುರಿಯುವ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಪಾಯ ಮೌಲ್ಯಮಾಪನವನ್ನು ನಿರಂತರವಾಗಿ ಪರಿಷ್ಕರಿಸುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.