ಮೇವು ಹಗರಣ: ಲಾಲು ಪ್ರಸಾದ್ ಪ್ರಕರಣದಲ್ಲಿ ಹಸ್ತಕ್ಷೇಪ ಮಾಡಲು ಸುಪ್ರೀಂ ನಿರಾಕರಣೆ
ನವದೆಹಲಿ: ಜಾನುವಾರು ಮೇವು ಹಗರಣ ಪ್ರಕರಣದಲ್ಲಿ ರಾಷ್ಟ್ರೀಯ ಜನತಾ ದಳ(ಆರ್ಜೆಡಿ) ಮುಖ್ಯಸ್ಥ ಲಾಲು ಪ್ರಸಾದ್ ಅವರಿಗೆ ಜಾಮೀನು ನೀಡಿದ ಜಾರ್ಖಂಡ್ ಹೈಕೋರ್ಟ್ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ಸುಪ್ರೀಂ ಕೋರ್ಟ್ ಮಂಗಳವಾರ(ಜುಲೈ 14) ನಿರಾಕರಿಸಿದೆ.ಈ ಪ್ರಕರಣದಲ್ಲಿ ಬಾಕಿಯಿರುವ ಮೇಲ್ಮನವಿಗಳ ವಿಚಾರಣೆಯನ್ನು ತ್ವರಿತಗೊಳಿಸಿ, ಆರು ತಿಂಗಳೊಳಗೆ ಅವುಗಳನ್ನು ಬಗೆಹರಿಸುವಂತೆ ನ್

ನವದೆಹಲಿ: ಜಾನುವಾರು ಮೇವು ಹಗರಣ ಪ್ರಕರಣದಲ್ಲಿ ರಾಷ್ಟ್ರೀಯ ಜನತಾ ದಳ(ಆರ್ಜೆಡಿ) ಮುಖ್ಯಸ್ಥ ಲಾಲು ಪ್ರಸಾದ್ ಅವರಿಗೆ ಜಾಮೀನು ನೀಡಿದ ಜಾರ್ಖಂಡ್ ಹೈಕೋರ್ಟ್ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ಸುಪ್ರೀಂ ಕೋರ್ಟ್ ಮಂಗಳವಾರ(ಜುಲೈ 14) ನಿರಾಕರಿಸಿದೆ.ಈ ಪ್ರಕರಣದಲ್ಲಿ ಬಾಕಿಯಿರುವ ಮೇಲ್ಮನವಿಗಳ ವಿಚಾರಣೆಯನ್ನು ತ್ವರಿತಗೊಳಿಸಿ, ಆರು ತಿಂಗಳೊಳಗೆ ಅವುಗಳನ್ನು ಬಗೆಹರಿಸುವಂತೆ ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್ ಮತ್ತು ಪಿ.ಬಿ ವರಾಲೆ ಅವರಿದ್ದ ಪೀಠವು ಹೈಕೋರ್ಟ್ಗೆ ಸೂಚಿಸಿದೆ.ಲಾಲು ಪ್ರಸಾದ್ ಅವರಿಗೆ 2022ರ ಏಪ್ರಿಲ್ನಲ್ಲಿ ಜಾರ್ಖಂಡ್ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಇದನ್ನು ಪ್ರಶ್ನಿಸಿ, ಸಿಬಿಐ ಸುಪ್ರೀಂ ಕೋರ್ಟ್ನ ಮೊರೆ ಹೋಗಿತ್ತು. ‘ಹೈಕೋರ್ಟ್ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ನಾವು ಇಚ್ಛಿಸುವುದಿಲ್ಲ...’ ಎಂದು ನ್ಯಾಯಪೀಠ ಹೇಳಿದೆ. ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಅವರು ದಿಯೋಗಢ ಖಜಾನೆ ಪ್ರಕರಣದಲ್ಲಿ ₹89 ಲಕ್ಷ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿತ್ತು. ತನಿಖೆಯ ವೇಳೆ ಇದು ಸಾಬೀತಾಗಿತ್ತು. ಈ ಪ್ರಕರಣದಲ್ಲಿ ಸಿಬಿಐನ ವಿಶೇಷ ನ್ಯಾಯಾಲಯವು ಅವರನ್ನು ತಪ್ಪಿತಸ್ಥರೆಂದು ಘೋಷಿಸಿ, ಮೂರೂವರೆ ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು.ಆದರೆ, ಈ ಪ್ರಕರಣದಲ್ಲಿ ಲಾಲು ಅವರು ಈಗಾಗಲೇ ತಮ್ಮ ಶಿಕ್ಷೆಯ ಅರ್ಧದಷ್ಟು ಅವಧಿಯನ್ನು ಪೂರೈಸಿದ್ದಾರೆ ಎಂಬ ಕಾರಣದ ಮೇಲೆ ಹೈಕೋರ್ಟ್ ಅವರ ಶಿಕ್ಷೆಯನ್ನು ಅಮಾನತುಗೊಳಿಸಿ ಜಾಮೀನು ಮಂಜೂರು ಮಾಡಿತ್ತು.