ಕರುನಾಡಿಗೆ ಬರ: ಮುಂಗಾರು ಕೊರತೆ ನಿರ್ವಹಣೆಗೆ ಯಾವ ಬೆಳೆ, ತಳಿ ಸೂಕ್ತ?
ಬೆಂಗಳೂರು: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ರೈತರು ಮಳೆಯ ಲಭ್ಯತೆಗೆ ಅನುಗುಣವಾಗಿ ಬೆಳೆ ಹಾಗೂ ತಳಿಗಳನ್ನು ಆಯ್ಕೆ ಮಾಡಿಕೊಂಡು ವೈಜ್ಞಾನಿಕ ಕೃಷಿ ಪದ್ಧತಿಗಳನ್ನು ಅನುಸರಿಸುವಂತೆ ಕೃಷಿ ಇಲಾಖೆ ಸಲಹೆ ನೀಡಿದೆ.ಎಲ್ ನಿನೋ ಪರಿಣಾಮದಿಂದ ಈ ವರ್ಷ ಮಳೆಯ ಪ್ರಮಾಣದ ಮೇಲ

ಬೆಂಗಳೂರು: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ರೈತರು ಮಳೆಯ ಲಭ್ಯತೆಗೆ ಅನುಗುಣವಾಗಿ ಬೆಳೆ ಹಾಗೂ ತಳಿಗಳನ್ನು ಆಯ್ಕೆ ಮಾಡಿಕೊಂಡು ವೈಜ್ಞಾನಿಕ ಕೃಷಿ ಪದ್ಧತಿಗಳನ್ನು ಅನುಸರಿಸುವಂತೆ ಕೃಷಿ ಇಲಾಖೆ ಸಲಹೆ ನೀಡಿದೆ.ಎಲ್ ನಿನೋ ಪರಿಣಾಮದಿಂದ ಈ ವರ್ಷ ಮಳೆಯ ಪ್ರಮಾಣದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಸರಿಯಾದ ಸಮಯದಲ್ಲಿ ಬಿತ್ತನೆ, ತೇವಾಂಶ ಸಂರಕ್ಷಣೆ ಹಾಗೂ ಮಧ್ಯಂತರ ಬರ ನಿರ್ವಹಣಾ ಕ್ರಮಗಳನ್ನು ಅನುಸರಿಸಿದರಿಂದ ಬೆಳೆ ಹಾನಿಯನ್ನು ತಡೆದು ಉತ್ತಮ ಇಳುವರಿ ಪಡೆಯಬಹುದು ಎಂದು ಇಲಾಖೆ ತಿಳಿಸಿದೆ.ಖುಷ್ಕಿ ಬೆಳೆಗಳಿಗೆ ಕನಿಷ್ಠ 50 ರಿಂದ 60 ಮಿ.ಮೀ. ಮಳೆಯಾದ ನಂತರ ಬಿತ್ತನೆ ಮಾಡುವುದು ಸೂಕ್ತವಾಗಿದೆ. ಜುಲೈ ತಿಂಗಳಲ್ಲಿ ಉತ್ತಮ ಮಳೆಯಾದರೆ ರಾಗಿ ಎಂಆರ್-1, ಎಂಆರ್-6, ಜಿಪಿಯು-28, ಜಿಪಿಯು-66, ಜಿಪಿಯು-67, ಜಿಪಿಯು-26, ಜಿಪಿಯು-45, ಜಿಪಿಯು-48 ಹಾಗೂ ಎಂಎಲ್-365 ತಳಿಗಳನ್ನು ಬಿತ್ತಬಹುದು. ಬಿತ್ತನೆಯ ವೇಳೆ ಶೇ.15ರಿಂದ 20ರಷ್ಟು ಹೆಚ್ಚುವರಿ ಬೀಜ ಬಳಸುವುದು ಹಾಗೂ ಬೀಜಗಳನ್ನು 18 ಗಂಟೆ ನೀರಿನಲ್ಲಿ ನೆನೆಸಿ 24 ಗಂಟೆ ನೆರಳಿನಲ್ಲಿ ಒಣಗಿಸಿ ಬಿತ್ತಿದರೆ ಉತ್ತಮ ಮೊಳಕೆ ಬರುತ್ತದೆ. ತೊಗರಿಯಲ್ಲಿ ಬಿಆರ್ಜಿ-3 ಮತ್ತು ಬಿಆರ್ಜಿ-5 ತಳಿಗಳನ್ನು ಬೆಳೆಯಬಹುದು.ಆಗಸ್ಟ್ನಲ್ಲಿ ಮಳೆಯಾದಲ್ಲಿ ರಾಗಿ ಜಿಪಿಯು-28, ಎಂಎಲ್-365, ಎಂಎಲ್-322, ಕೆಎಂಆರ್-316 ಹಾಗೂ ಜಿಪಿಯು-66 ತಳಿಗಳನ್ನು ಆಗಸ್ಟ್ 15ರೊಳಗೆ, ಜಿಪಿಯು-26, ಜಿಪಿಯು-45 ಮತ್ತು ಜಿಪಿಯು-48 ತಳಿಗಳನ್ನು ಆಗಸ್ಟ್ ಅಂತ್ಯದವರೆಗೆ ಬಿತ್ತಬಹುದು. ಇದೇ ಅವಧಿಯಲ್ಲಿ ಅಲಸಂದೆ, ಹುರುಳಿ, ಹೆಬ್ಬಾಳ ಅವರೆ ಹಾಗೂ ಮೇವಿನ ಜೋಳ ಬೆಳೆಯಲು ಅವಕಾಶವಿದೆ. ಸೆಪ್ಟೆಂಬರ್ನಲ್ಲಿ ಮಳೆಯಾದರೆ ರಾಗಿ ಸಸಿ ಮಡಿಗಳಿಂದ ನಾಟಿ ಕಾರ್ಯ ಪೂರ್ಣಗೊಳಿಸಿ ಕೆಎಂಆರ್-301 ಹಾಗೂ ಇಂಡಾಫ್-15 ಸೇರಿದಂತೆ ಸೂಕ್ತ ತಳಿಗಳನ್ನು ನಾಟಿ ಮಾಡಬಹುದಾಗಿದೆ.ಹೊಲದಲ್ಲಿ ತೇವಾಂಶ ಉಳಿಸಿಕೊಳ್ಳಲು ಕಳೆ ನಿಯಂತ್ರಣ, ಅಂತರ ಬೇಸಾಯ ಹಾಗೂ ಕೃಷಿ ತ್ಯಾಜ್ಯಗಳನ್ನು ಹೊದಿಕೆಯಾಗಿ ಬಳಸಬೇಕು. ಮಧ್ಯಂತರ ಬರ ಪರಿಸ್ಥಿತಿ ಎದುರಾದಲ್ಲಿ ಬೆಳೆ ಚೇತರಿಕೆಗೆ ಶೇ.1ರಿಂದ 3 ಯೂರಿಯಾ, ಶೇ.0.5 ಜಿಂಕ್ ಸಲ್ಫೇಟ್, ಶೇ.2 ಡಿಎಪಿ ಅಥವಾ 13:0:45 ಮತ್ತು 19:19:19 ದ್ರಾವಣಗಳನ್ನು ಸಿಂಪಡಿಸಬಹುದು. ನೀರಿನ ಲಭ್ಯತೆ ಇರುವ ಪ್ರದೇಶಗಳಲ್ಲಿ ಹನಿ ಅಥವಾ ತುಂತುರು ನೀರಾವರಿ ಅಳವಡಿಸಿಕೊಳ್ಳುವುದು ಉತ್ತಮ ಎಂದು ಸೂಚಿಸಿದ್ದಾರೆ.ಹವಾಮಾನ ಮುನ್ಸೂಚನೆಗಳನ್ನು ಗಮನಿಸಿ, ಮಳೆಯ ಲಭ್ಯತೆಗೆ ಅನುಗುಣವಾಗಿ ಬೆಳೆ ತಳಿಗಳ ಆಯ್ಕೆ, ತೇವಾಂಶ ಸಂರಕ್ಷಣೆ ಹಾಗೂ ಬರ ನಿರ್ವಹಣಾ ಕ್ರಮಗಳನ್ನು ಅನುಸರಿಸುವ ಮೂಲಕ ರೈತರು ಮಳೆಯ ಕೊರತೆಯಿಂದಾಗುವ ಬೆಳೆ ನಷ್ಟವನ್ನು ತಡೆದು ಉತ್ತಮ ಇಳುವರಿ ಪಡೆಯಬಹುದಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಯಲ್ಲಿ ತಿಳಿಸಿದೆ.