ಕೊಡಗಿನಲ್ಲಿ ಕೋಬಾಲ್ಟ್, ನಿಕಲ್ ಖನಿಜಗಳ ನಿಕ್ಷೇಪ ಪತ್ತೆ..? – ಕೃಷಿ ಭೂಮಿ ಕಳೆದುಕೊಳ್ಳುವ ಆತಂಕದಲ್ಲಿ ಗ್ರಾಮಸ್ಥರು
ಮಡಿಕೇರಿ: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕನ್ನಳ್ಳಿಕಟ್ಟೆ ಗ್ರಾಮ ಇದೀಗ ರಾಜ್ಯದ ಗಮನ ಸೆಳೆಯುತ್ತಿದೆ. 2018ರ ಭೂಕುಸಿತದ ಬಳಿಕ ನಡೆದ ವಿಜ್ಞಾನಿಗಳ ಅಧ್ಯಯನದಲ್ಲಿ ಈ ಭಾಗದಲ್ಲಿ ಕೋಬಾಲ್ಟ್ ಮತ್ತು ನಿಕಲ್ ಖನಿಜಗಳ (Cobalt, Nickel Minerals) ಅಂಶಗಳು ಪತ್ತೆಯಾಗಿರುವ ಮಾಹಿತಿ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಕ

ಮಡಿಕೇರಿ: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕನ್ನಳ್ಳಿಕಟ್ಟೆ ಗ್ರಾಮ ಇದೀಗ ರಾಜ್ಯದ ಗಮನ ಸೆಳೆಯುತ್ತಿದೆ. 2018ರ ಭೂಕುಸಿತದ ಬಳಿಕ ನಡೆದ ವಿಜ್ಞಾನಿಗಳ ಅಧ್ಯಯನದಲ್ಲಿ ಈ ಭಾಗದಲ್ಲಿ ಕೋಬಾಲ್ಟ್ ಮತ್ತು ನಿಕಲ್ ಖನಿಜಗಳ (Cobalt, Nickel Minerals) ಅಂಶಗಳು ಪತ್ತೆಯಾಗಿರುವ ಮಾಹಿತಿ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಕಳೆದ 2 ವರ್ಷಗಳಿಂದ ವಿಜ್ಞಾನಿಗಳ ತಂಡ (Scientists Team) ನಿರಂತರವಾಗಿ ಮಣ್ಣಿನ ಮಾದರಿಗಳನ್ನ ಸಂಗ್ರಹಿಸುತ್ತಿದ್ದು, ತಮ್ಮ ಕೃಷಿ ಭೂಮಿಯನ್ನು ಸರ್ಕಾರ ಅಥವಾ ಖಾಸಗಿ ಕಂಪನಿಗಳು ಸ್ವಾಧೀನಪಡಿಸಿಕೊಳ್ಳುವ ಸಾಧ್ಯತೆ ಇದೆ ಎಂಬ ಭಯದಲ್ಲಿ ಗ್ರಾಮಸ್ಥರು ದಿನ ಕಳೆಯುತ್ತಿದ್ದಾರೆ. ಕೊಡಗು (Kodagu) ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕನ್ನಳ್ಳಿಕಟ್ಟೆ ಗ್ರಾಮ. ಹಚ್ಚಹಸಿರಿನ ನಡುವೆ ನೆಲೆಸಿರುವ ಈ ಪುಟ್ಟ ಗ್ರಾಮದಲ್ಲಿ ಈಗ ಖನಿಜ ಸಂಪತ್ತಿನ ಚರ್ಚೆ ಜೋರಾಗಿದೆ. 2018ರಲ್ಲಿ ಸುರಿದ ಭಾರೀ ಮಳೆಯಿಂದ ಈ ಭಾಗದಲ್ಲಿ ಭೂಕುಸಿತ ಉಂಟಾಗಿತ್ತು. ಅದರ ಕಾರಣವನ್ನು ಅಧ್ಯಯನ ಮಾಡಲು ಆಗಮಿಸಿದ್ದ ವಿಜ್ಞಾನಿಗಳ ತಂಡಕ್ಕೆ ಇಲ್ಲಿನ ಮಣ್ಣಿನಲ್ಲಿ ಕೋಬಾಲ್ಟ್ ಹಾಗೂ ನಿಕಲ್ ಅಂಶಗಳಿರುವ ಸಾಧ್ಯತೆ ಗೋಚರಿಸಿತ್ತು ಎನ್ನಲಾಗುತ್ತಿದೆ. ಗೂಗಲ್ ಮ್ಯಾಪ್ನಲ್ಲೂ ನಿಕ್ಷೇಪ ಗುರುತು ಕಳೆದ ಎರಡು ವರ್ಷಗಳಿಂದ ವಿಜ್ಞಾನಿಗಳ ತಂಡ ಗ್ರಾಮದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಮಣ್ಣಿನ ಮಾದರಿಗಳನ್ನ ಸಂಗ್ರಹಿಸುತ್ತಿದೆ. ಈಗಾಗಲೇ ಹಲವೆಡೆ ಮಣ್ಣು ಹಾಗೂ ಕಲ್ಲಿನ ಮಾದರಿಗಳನ್ನ ಪರೀಕ್ಷೆಗಾಗಿ ಕೊಂಡೊಯ್ಯಲಾಗಿದೆ. ಇದರ ನಡುವೆ, ಗೂಗಲ್ ಮ್ಯಾಪ್ನಲ್ಲಿಯೂ ಈ ಪ್ರದೇಶವನ್ನು ಕೋಬಾಲ್ಟ್ ಮತ್ತು ನಿಕಲ್ ನಿಕ್ಷೇಪ ಇರುವ ಪ್ರದೇಶವಾಗಿ ಗುರುತಿಸಲಾಗಿದೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಇದೇ ವಿಚಾರ ಈಗ ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ತಮ್ಮ ಕೃಷಿ ಭೂಮಿಯನ್ನು ಖನಿಜ ಗಣಿಗಾರಿಕೆಯ ಹೆಸರಿನಲ್ಲಿ ಕಸಿದುಕೊಳ್ಳುವ ಪ್ರಯತ್ನ ನಡೆಯಬಹುದು ಎಂಬ ಅನುಮಾನವನ್ನು ಅವರು ವ್ಯಕ್ತಪಡಿಸುತ್ತಿದ್ದಾರೆ. ತಲೆಮಾರುಗಳಿಂದ ಕೃಷಿಯನ್ನೇ ನಂಬಿಕೊಂಡು ಬದುಕುತ್ತಿರುವ ನಾವು ಯಾವುದೇ ಕಾರಣಕ್ಕೂ ನಮ್ಮ ಭೂಮಿಯನ್ನು ಬಿಟ್ಟುಕೊಡುವುದಿಲ್ಲ ಎಂದು ಗ್ರಾಮಸ್ಥರು ಸ್ಪಷ್ಟಪಡಿಸಿದ್ದಾರೆ. ಕೋಬಾಲ್ಟ್ ಹಾಗೂ ನಿಕಲ್ ಇಂದಿನ ಜಗತ್ತಿನಲ್ಲಿ ಅತ್ಯಮೂಲ್ಯ ಖನಿಜಗಳಾಗಿದ್ದು, ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿಗಳು, ಮೊಬೈಲ್ ಫೋನ್ಗಳು, ಎಲೆಕ್ಟ್ರಾನಿಕ್ ಸಾಧನಗಳು ಸೇರಿದಂತೆ ಹಲವು ಕೈಗಾರಿಕೆಗಳಲ್ಲಿ ಬಳಸಲಾಗುತ್ತದೆ. ಹೀಗಾಗಿ ಈ ಖನಿಜಗಳ ಪತ್ತೆ ಮಹತ್ವ ಪಡೆದಿದೆ. ಆದರೆ, ಸದ್ಯಕ್ಕೆ ಈ ಭಾಗದಲ್ಲಿ ಖನಿಜ ಗಣಿಗಾರಿಕೆಗೆ ಸಂಬಂಧಿಸಿದ ಯಾವುದೇ ಅಧಿಕೃತ ಘೋಷಣೆ ಅಥವಾ ಯೋಜನೆ ಪ್ರಕಟವಾಗಿಲ್ಲ. ವಿಜ್ಞಾನಿಗಳ ಅಧ್ಯಯನ ಮಾತ್ರ ನಡೆಯುತ್ತಿದೆ ಎಂಬ ಮಾಹಿತಿಯಷ್ಟೇ ಲಭ್ಯವಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಒಟ್ಟಿನಲ್ಲಿ, ಕೊಡಗಿನ ಕನ್ನಳ್ಳಿಕಟ್ಟೆ ಗ್ರಾಮದಲ್ಲಿ ವಿಜ್ಞಾನಿಗಳ ಅಧ್ಯಯನ ಮುಂದುವರಿದಿರುವುದು ಗ್ರಾಮಸ್ಥರಲ್ಲಿ ಹಲವು ಅನುಮಾನಗಳಿಗೆ ಕಾರಣವಾಗಿದೆ. ಒಂದೆಡೆ ಅಮೂಲ್ಯ ಖನಿಜ ಪತ್ತೆಯಾಗುವ ಸಾಧ್ಯತೆ ಇದ್ದರೆ, ಮತ್ತೊಂದೆಡೆ ತಮ್ಮ ಕೃಷಿ ಭೂಮಿ ಕಳೆದುಕೊಳ್ಳುವ ಆತಂಕದಲ್ಲಿ ರೈತರಿದ್ದಾರೆ. ಈ ಕುರಿತು ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆ ಸ್ಪಷ್ಟನೆ ನೀಡಿದರೆ ಮಾತ್ರ ಗ್ರಾಮಸ್ಥರ ಆತಂಕ ನಿವಾರಣೆಯಾಗಲಿದೆ.