ರಕ್ತಸಿಕ್ತ ಸಮವಸ್ತ್ರ, ಹಲ್ಲೆಯಿಂದ ತಲೆಗೆ ಹೊಲಿಗೆ: ಜಂತರ್ ಮಂತರ್ನಲ್ಲಿ ಪೊಲೀಸರ ಮೇಲಾದ ದೌರ್ಜನ್ಯದ ಬಗ್ಗೆ ಕುಟುಂಬಸ್ಥರ ನೋವಿನ ನುಡಿ
ನವದೆಹಲಿ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ (NEET Paper Leak) ವಿರುದ್ಧ ದೆಹಲಿಯ ಜಂತರ್ ಮಂತರ್ನಲ್ಲಿ (Jantar Mantar) ಇತ್ತೀಚೆಗೆ ನಡೆದ ಪ್ರತಿಭಟನೆಯಲ್ಲಿ ಕರ್ತವ್ಯದಲ್ಲಿರುವಾಗ ತಮ್ಮ ಪ್ರೀತಿಪಾತ್ರರ ಮೇಲೆ ದಾಳಿ ನಡೆದ ಬಗ್ಗೆ ದೆಹಲಿ ಪೊಲೀಸ್ ಸಿಬ್ಬಂದಿಯ ಕುಟುಂಬ ಸದಸ್ಯರು ತಮ್ಮ ನೋವಿನ ಮಾತುಗಳನ್ನು ಹಂಚಿಕೊಂಡಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸ

ನವದೆಹಲಿ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ (NEET Paper Leak) ವಿರುದ್ಧ ದೆಹಲಿಯ ಜಂತರ್ ಮಂತರ್ನಲ್ಲಿ (Jantar Mantar) ಇತ್ತೀಚೆಗೆ ನಡೆದ ಪ್ರತಿಭಟನೆಯಲ್ಲಿ ಕರ್ತವ್ಯದಲ್ಲಿರುವಾಗ ತಮ್ಮ ಪ್ರೀತಿಪಾತ್ರರ ಮೇಲೆ ದಾಳಿ ನಡೆದ ಬಗ್ಗೆ ದೆಹಲಿ ಪೊಲೀಸ್ ಸಿಬ್ಬಂದಿಯ ಕುಟುಂಬ ಸದಸ್ಯರು ತಮ್ಮ ನೋವಿನ ಮಾತುಗಳನ್ನು ಹಂಚಿಕೊಂಡಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಕುಟುಂಬದವರು ತಮ್ಮ ಕರ್ತವ್ಯವನ್ನು ಸರಳವಾಗಿ ನಿರ್ವಹಿಸುತ್ತಿದ್ದಾರೆ. ಅವರನ್ನು ನಿಂದಿಸುವುದು ಅಥವಾ ಆಕ್ರಮಣಕಾರರು ಎಂದು ಹಣೆಪಟ್ಟಿ ಕಟ್ಟುವುದು ಸರಿಯಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನೀಟ್ ಪ್ರತಿಭಟನೆ ವೇಳೆ ಪ್ರಧಾನಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ; ಯುವತಿ ವಿರುದ್ಧ ಎಫ್ಐಆರ್ ಸಮವಸ್ತ್ರದ ಹಿಂದೆ ಒಬ್ಬ ಪೊಲೀಸ್ ಮಾತ್ರವಲ್ಲ. ಅವರ ಹಿಂದೆ ತಾಯಿ, ತಂದೆ, ಹೆಂಡತಿ, ಮಕ್ಕಳು ಮತ್ತು ಅವರು ಸುರಕ್ಷಿತವಾಗಿ ಮನೆಗೆ ಮರಳಲು ತಡರಾತ್ರಿಯವರೆಗೆ ಕಾಯುತ್ತಿರುವ ಇಡೀ ಕುಟುಂಬವಿದೆ ಎಂದು ಮಹಿಳೆಯೊಬ್ಬರು ನೊಂದು ನುಡಿದಿದ್ದಾರೆ. ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಕುಂಜಾಲ್ ಮಾತನಾಡಿ, ನಮ್ಮ ತಂದೆ ಸಬ್ ಇನ್ಸ್ಪೆಕ್ಟರ್. ಅವರು ಭಾರತೀಯ ನೌಕಾಪಡೆಯಲ್ಲಿ ಮೆರೈನ್ ಕಮಾಂಡೋ ಆಗಿಯೂ ಸೇವೆ ಸಲ್ಲಿಸಿದ್ದರು. ನನ್ನ ತಂದೆ ಪ್ರತಿಭಟನಾ ಸ್ಥಳದಲ್ಲಿದ್ದರು. ಅವರು ಬ್ಯಾರಿಕೇಡ್ಗಳ ಬಳಿ ಮುಂಚೂಣಿಯಲ್ಲಿದ್ದರು. ಅಲ್ಲಿ ಭಾರಿ ಜನಸಮೂಹವಿತ್ತು. ನನ್ನ ತಂದೆ ರಾತ್ರಿ ಮನೆಗೆ ಬಂದಾಗಲೆಲ್ಲಾ, ‘ಇದು ಇನ್ನು ಮುಂದೆ ವಿದ್ಯಾರ್ಥಿಗಳ ಪ್ರತಿಭಟನೆಯಂತೆ ಕಾಣುತ್ತಿಲ್ಲ. ಅನೇಕ ಸಮಾಜ ವಿರೋಧಿ ಅಂಶಗಳು ಇದರಲ್ಲಿ ಸೇರಿಕೊಂಡಿವೆ’ ಅಂತ ಹೇಳುತ್ತಿದ್ದರೆಂದು ತಿಳಿಸಿದ್ದಾರೆ. ಮರುದಿನವೇ (25 ರಂದು) ನನ್ನ ತಂದೆಯನ್ನು ಗುಂಪೊಂದು ಎಳೆದೊಯ್ದು ಜಂತರ್ ಮಂತರ್ನ ವೇದಿಕೆಯ ಬಳಿ ಹಲ್ಲೆ ನಡೆಸಿತ್ತು. ಅವರು ಆಸ್ಪತ್ರೆಯಲ್ಲಿ ಸುಮಾರು ನಾಲ್ಕು ಗಂಟೆಗಳ ಕಾಲ ಪ್ರಜ್ಞಾಹೀನರಾಗಿದ್ದರು. ರಾತ್ರಿ 10 ಗಂಟೆ ಸುಮಾರಿಗೆ, ನನ್ನ ತಂದೆಯ ಸಹೋದ್ಯೋಗಿಗಳು ಅವರನ್ನು ಮನೆಗೆ ಕರೆತಂದರು. ಅವರ ಸಮವಸ್ತ್ರವು ಸಂಪೂರ್ಣವಾಗಿ ರಕ್ತದಿಂದ ಕೆಂಪಾಗಿತ್ತು ಎಂದು ಕುಂಜಾಲ್ ಆಗಿನ ಪರಿಸ್ಥಿತಿಯನ್ನು ವಿವರಿಸಿದ್ದಾರೆ. ಇದನ್ನೂ ಓದಿ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ: 13 ಆರೋಪಿಗಳ ವಿರುದ್ಧ ಸಿಬಿಐ ಚಾರ್ಜ್ ಶೀಟ್ ಸಲ್ಲಿಕೆ ತಂದೆಯನ್ನು ಹಾಗೆ ನೋಡಿದ್ದು ನಮಗೆ ನಂಬಲಾಗದಷ್ಟು ನೋವನ್ನುಂಟುಮಾಡಿತು. ನಾವು ಅವರನ್ನು ‘ಅಪ್ಪಾ, ಇದು ಹೇಗೆ ಸಂಭವಿಸಿತು’ ಎಂದು ಕೇಳಿದೆ. ಆಗ ಅವರು, ‘ಮಗು ಏನೂ ಇಲ್ಲ, ಕರ್ತವ್ಯದಲ್ಲಿರುವಾಗ ಸಣ್ಣಪುಟ್ಟ ಗಾಯಗಳು ಆಗುವುದು ಸಹಜ’ ಎಂದು ಉತ್ತರಿಸಿದ್ದರು. ಆದರೆ, ಅವರ ತಲೆಗೆ ನಾಲ್ಕು ಹೊಲಿಗೆ ಹಾಕಲಾಗಿತ್ತು. ಅದು ಸಣ್ಣ ಗಾಯವಾಗಿರಲಿಲ್ಲ ಎಂದು ಬೇಸರದಿಂದ ನುಡಿದಿದ್ದಾರೆ. ಮರುದಿನ, ನನ್ನ ತಂದೆಯ ಮೇಲೆ ಹಲ್ಲೆ ನಡೆಸಿದವರು ತಮ್ಮ ಅಪರಾಧವನ್ನು ತೊಳೆದುಕೊಳ್ಳಲು ಮತ್ತು ಎಲ್ಲಾ ಪೊಲೀಸ್ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಲು ಸುಪ್ರೀಂ ಕೋರ್ಟ್ಗೆ ಹೋಗುತ್ತಿದ್ದಾರೆ ಎಂದು ನನಗೆ ತಿಳಿದಾಗ, ಮನಸ್ಸಿಗೆ ತುಂಬಾ ನೋವಾಯಿತು. ನನ್ನ ತಂದೆಗೆ ನ್ಯಾಯ ಕೇಳಲು ನಾನು ಕೂಡ ಹೋಗಬೇಕೆಂದು ಅನಿಸಿತು. ನನಗೆ ಇತರ ಪೊಲೀಸ್ ಕುಟುಂಬಗಳಿಂದಲೂ ಬೆಂಬಲ ಸಿಕ್ಕಿತು ಎಂದು ತಿಳಿಸಿದ್ದಾರೆ. ಸೀಮಾ ಎಂಬ ಮಹಿಳೆ ತನ್ನ ಪತಿ ಸಹಾಯಕ ಸಬ್-ಇನ್ಸ್ಪೆಕ್ಟರ್ ಬಗ್ಗೆ ಮಾತನಾಡಿ, ಜಂತರ್ ಮಂತರ್ ಪ್ರತಿಭಟನೆಯ ಸಮಯದಲ್ಲಿ, ಅವರನ್ನು ಸಹ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಪ್ರತಿಭಟನೆಯನ್ನು ಶಾಂತಿಯುತವಾಗಿ ನಡೆಸಬೇಕಿತ್ತು. ಅವರು ಸಂಪೂರ್ಣ ಜಾಗರೂಕತೆಯಿಂದ ತಮ್ಮ ಕರ್ತವ್ಯಗಳನ್ನು ನಿರ್ವಹಿಸುತ್ತಿದ್ದರು. ಜುಲೈ 20 ರಂದು, ಅವರು ಎಂದಿನಂತೆ ಮನೆಯಿಂದ ಟಿಫಿನ್ ತೆಗೆದುಕೊಂಡು ಬೇಗನೆ ಹೊರಟರು. ನಾನು ಬೆಳಿಗ್ಗೆ 11 ಗಂಟೆ ಸುಮಾರಿಗೆ ಅವರೊಂದಿಗೆ ಮಾತನಾಡಿದಾಗ, ‘ಜಂತರ್ ಮಂತರ್ನಲ್ಲಿ ಜನಸಂದಣಿ ಸಾಕಷ್ಟು ದೊಡ್ಡದಾಗಿದೆ. ಪ್ರತಿಭಟನಾಕಾರರು ಸಂಸತ್ತಿನ ಕಡೆಗೆ ಮೆರವಣಿಗೆ ನಡೆಸುತ್ತಿದ್ದಾರೆ’ ಎಂದು ಅವರು ನನಗೆ ಫೋನ್ನಲ್ಲಿ ಹೇಳಿದ್ದರು. ನಾನು ಚಿಂತಿತಳಾಗಿದ್ದೆ. ಹುಷಾರಾಗಿರಿ ಅಂತ ಪತಿಗೆ ಹೇಳಿದ್ದೆ. ಮತ್ತೆ ಅವರೊಂದಿಗೆ ಮಾತನಾಡಲು ರಾತ್ರಿ 7 ಗಂಟೆಗೆ ಕರೆ ಮಾಡಿದಾಗ, ಆಸ್ಪತ್ರೆಗೆ ದಾಖಲಿಸಿರುವ ವಿಚಾರ ತಿಳಿಸಿಯಿತು. ಜನಸಮೂಹದಲ್ಲಿ ಕರ್ತವ್ಯದಲ್ಲಿದ್ದ ನನ್ನ ಪತಿಯ ಮೇಲೂ ದಾಳಿ ನಡೆದಿರುವುದು ಗೊತ್ತಾಯಿತು. ಪ್ರತಿಭಟನಾಕಾರರ ನಡುವೆ ಕಿಡಿಗೇಡಿಗಳು ಸೇರಿಕೊಂಡಿದ್ದಾರೆ. ಅವರು ಪೊಲೀಸ್ ಸಿಬ್ಬಂದಿಯ ಮೇಲೆ ಸಿಕ್ಕಸಿಕ್ಕ ವಸ್ತುಗಳು, ಚಪ್ಪಲಿ, ಬೂಟು, ಕಲ್ಲುಗಳನ್ನು ಎಸೆದಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಈ ಸಂಬಂಧ ಸಾಕಷ್ಟು ಕ್ಲಿಪ್ಗಳು ಹರಿದಾಡುತ್ತಿವೆ ಎಂದು ಸೀಮಾ ಮಾತನಾಡಿದ್ದಾರೆ. ಇದನ್ನೂ ಓದಿ: ಲಾಠಿಚಾರ್ಜ್ ಚರ್ಚೆಗೆ ವಿಪಕ್ಷಗಳ ಪಟ್ಟು- ನೀಟ್ ಚರ್ಚೆ ನಡೆಯದೇ ಕಲಾಪ ಮುಂದೂಡಿಕೆ ಲಕ್ಷ್ಯ ಸಿಂಗ್ ಬಿಶ್ತ್ ಮಾತನಾಡಿ, ನನ್ನ ತಂದೆ ಸಹಾಯಕ ಪೊಲೀಸ್ ಆಯುಕ್ತರಾಗಿದ್ದಾರೆ. ವೃತ್ತಿಜೀವನದಲ್ಲಿ ನಾಲ್ಕು ಶೌರ್ಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅವರ ತಲೆಗೆ ಗಂಭೀರ ಗಾಯವಾಗಿತ್ತು. ನಾನು ಫೋಟೋ ನೋಡಿ ಗಾಬರಿಗೊಂಡೆ. ಅವರ ತಲೆಗೆ ನಾಲ್ಕು ಹೊಲಿಗೆ ಹಾಕಲಾಗಿದೆ. ಅದನ್ನು ನೋಡಿ ಭಯಭೀತನಾದೆ. ನನ್ನ ತಂದೆ ಮನೆಗೆ ಬಂದಾಗ, ‘ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಕೇವಲ ವಿದ್ಯಾರ್ಥಿಗಳಿಲ್ಲ; ಅದರಲ್ಲಿ ರೌಡಿಗಳು ಮತ್ತು ಆಕ್ರಮಣಕಾರರು ಸೇರಿದ್ದಾರೆ’ ಎಂದು ಅವರು ನನಗೆ ಹೇಳಿದ್ದರು ಎಂದು ನೆನಪಿಸಿಕೊಂಡಿದ್ದಾರೆ. ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ದೆಹಲಿಯ ಜಂತರ್ ಮಂತರ್ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದಲ್ಲಿ ಭಾರೀ ಪ್ರತಿಭಟನೆ ನಡೆಯಿತು. ಪ್ರತಿಭಟನೆಯು ಹಿಂಸಾಚಾರಕ್ಕೂ ತಿರುಗಿತ್ತು. ಒಂದು ತಿಂಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್ಕಾರ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಂದ ರಾಜೀನಾಮೆ ಕೊಡಿಸಿತು. ವಿದ್ಯಾರ್ಥಿಗಳ ಬೇಡಿಕೆಗಳನ್ನು ಈಡೇರಿಸುವುದಾಗಿಯೂ ಭರವಸೆ ನೀಡಿತು.