ಬೀದರ್ | ಒಲಿಯದ ಮಂತ್ರಿ ಭಾಗ್ಯ; ರಹೀಂ ಖಾನ್ಗೆ ನಿರಾಸೆ
ಬೀದರ್: ಸಚಿವ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ಸಿಗದಕ್ಕೆ ಶಾಸಕ ರಹೀಂ ಖಾನ್ ಅವರಿಗೆ ನಿರಾಸೆಯಾಗಿದೆ.ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ಎರಡರಲ್ಲಿ ಕಾಂಗ್ರೆಸ್ ಶಾಸಕರು ಚುನಾಯಿತರಾಗಿದ್ದರು. ಭಾಲ್ಕಿಯಿಂದ ಈಶ್ವರ ಬಿ. ಖಂಡ್ರೆ, ಬೀದರ್ ವಿಧಾನಸಭಾ ಕ್ಷೇತ್ರದಿಂದ ರಹೀಂ ಖಾನ್ ಆಯ್ಕೆಯಾಗಿದ್ದರು. ಸಿದ್ದರಾಮಯ್ಯನವರ ಸಂಪುಟದಲ್ಲ

ಬೀದರ್: ಸಚಿವ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ಸಿಗದಕ್ಕೆ ಶಾಸಕ ರಹೀಂ ಖಾನ್ ಅವರಿಗೆ ನಿರಾಸೆಯಾಗಿದೆ.ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ಎರಡರಲ್ಲಿ ಕಾಂಗ್ರೆಸ್ ಶಾಸಕರು ಚುನಾಯಿತರಾಗಿದ್ದರು. ಭಾಲ್ಕಿಯಿಂದ ಈಶ್ವರ ಬಿ. ಖಂಡ್ರೆ, ಬೀದರ್ ವಿಧಾನಸಭಾ ಕ್ಷೇತ್ರದಿಂದ ರಹೀಂ ಖಾನ್ ಆಯ್ಕೆಯಾಗಿದ್ದರು. ಸಿದ್ದರಾಮಯ್ಯನವರ ಸಂಪುಟದಲ್ಲಿ ಇಬ್ಬರಿಗೂ ಸಚಿವ ಸ್ಥಾನ ಒಲಿದಿತ್ತು.ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಡಿ.ಕೆ. ಶಿವಕುಮಾರ್ ರಾಜ್ಯದ ಮುಖ್ಯಮಂತ್ರಿಯಾದರು. ಅವರ ನೇತೃತ್ವದ ಸಂಪುಟದಲ್ಲಿ ಖಂಡ್ರೆಗಷ್ಟೇ ಸಚಿವಗಿರಿ ಸಿಕ್ಕಿತು. ಈ ಸಲವಾದರೂ ಅವಕಾಶ ಒಲಿಯಬಹುದು ಎಂಬ ನಿರೀಕ್ಷೆ ರಹೀಂ ಖಾನ್ ಅವರಿಗೆ ಇತ್ತು. ಆದರೆ, ಅದು ಕೈಗೂಡಿಲ್ಲ.ಅಲ್ಪಸಂಖ್ಯಾತರ ಕೋಟಾದಡಿ ಸಚಿವ ಸ್ಥಾನ ನೀಡಬೇಕೆಂದು ಅವರು ಹೈಕಮಾಂಡ್ಗೆ ಮನವಿ ಮಾಡಿದ್ದರು. ಅವರ ಬೆಂಬಲಿಗರು ನವದೆಹಲಿ ಹಾಗೂ ಬೆಂಗಳೂರಿಗೆ ತೆರಳಿ ವರಿಷ್ಠರ ಮೇಲೆ ಒತ್ತಡ ಹಾಕಿದ್ದರು. ಕ್ಷೇತ್ರದಲ್ಲೂ ಅವರ ಪರ ಹೋರಾಟಗಳು ನಡೆದಿದ್ದವು. ಆದರೆ, ಅದು ಫಲಿಸಿಲ್ಲ.2009, 2016, 2018 ಹಾಗೂ 2023ರ ಚುನಾವಣೆಯಲ್ಲಿ ಬೀದರ್ ಕ್ಷೇತ್ರದಿಂದ ಚುನಾಯಿತರಾಗಿರುವ ರಹೀಂ ಖಾನ್ ಅವರು ಸಿದ್ದರಾಮಯ್ಯನವರು ಮೊದಲ ಸಲ ಮುಖ್ಯಮಂತ್ರಿಯಾದಾಗ ಅವರ ಸಂಪುಟದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಚಿವರಾಗಿ ಕೆಲಸ ನಿರ್ವಹಿಸಿದ್ದರು. 2023ರ ಮೇ 27ರಿಂದ 2026ರ ಮೇ 29ರವರೆಗೆ ಪೌರಾಡಳಿತ ಮತ್ತು ಹಜ್ ಖಾತೆ ಸಚಿವರಾಗಿದ್ದರು.ಸತತ ನಾಲ್ಕು ಚುನಾವಣೆಗಳಲ್ಲಿ ಜಯ ಗಳಿಸಿ, ಎರಡು ಸಲ ಸಚಿವ ಸ್ಥಾನ ಅಲಂಕರಿಸಿ, ಪಕ್ಷ ಸಂಘಟನೆಗೂ ಶ್ರಮಿಸಿದ್ದರಿಂದ ಶಿವಕುಮಾರ್ ಸಂಪುಟದಲ್ಲಿ ಸ್ಥಾನ ಸಿಗುತ್ತದೆ ಎಂಬ ಉಮೇದಿನಲ್ಲಿ ಇದ್ದರು. ಆದರೆ, ಮಂತ್ರಿಗಿರಿ ಸಿಗದಕ್ಕೆ ರಹೀಂ ಖಾನ್ ಹಾಗೂ ಅವರ ಬೆಂಬಲಿಗರಿಗೆ ನಿರಾಸೆಯಾಗಿದೆ.‘ಕಲ್ಯಾಣ ಕರ್ನಾಟಕದಲ್ಲಿ ಅಲ್ಪಸಂಖ್ಯಾತ ಸಮುದಾಯದಿಂದ ಇಬ್ಬರಷ್ಟೇ ಶಾಸಕರಾಗಿದ್ದು, ಹಿರಿತನ, ಪಕ್ಷನಿಷ್ಠೆ ಆಧರಿಸಿ ಸಚಿವ ಸ್ಥಾನ ನೀಡಬೇಕು’ ಎಂದು ಅವರ ಬೆಂಬಲಿಗರು ಒತ್ತಡ ಹಾಕಿದ್ದರು. ಅದನ್ನು ಪಕ್ಷದ ವರಿಷ್ಠರು ಮನ್ನಿಸಿಲ್ಲ.ಈ ಸಂಬಂಧ ಸಚಿವ ರಹೀಂ ಖಾನ್ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ ಅವರು ಮಾಹಿತಿಗೆ ಲಭ್ಯರಾಗಲಿಲ್ಲ.