ಅಪರಾಧಿಗಳ ಪತ್ತೆ, ಹಸ್ತಾಂತರಕ್ಕೆ ಸಹಕರಿಸಿ: ಭಾರತ ಮನವಿ
ಹೈದರಾಬಾದ್ : ವಿದೇಶಗಳಲ್ಲಿ ತಲೆಮರೆಸಿಕೊಂಡಿರುವ ಅಪರಾಧಿಗಳನ್ನು ಪತ್ತೆಹಚ್ಚಲು, ಹಸ್ತಾಂತರಿಸಲು, ಕದ್ದ ಆಸ್ತಿಯನ್ನು ಮರಳಿ ಪಡೆಯಲು ಹಾಗೂ ಹಣವನ್ನು ಅಕ್ರಮವಾಗಿ ಗಡಿಯಾಚೆಗೆ ಸಾಗಿಸುವುದನ್ನು ತಡೆಗಟ್ಟಲು ಎಲ್ಲ ದೇಶಗಳು ಸಹಕಾರ ನೀಡಬೇಕು ಎಂದು ಭಾರತ ಮನವಿ ಮಾಡಿದೆ.ಇಲ್ಲಿ ಮಂಗಳವಾರ ಆಯೋಜಿಸಿದ್ದ ಎರಡು ದಿನಗಳ ಬ್ರಿಕ್ಸ್ ಭ್ರಷ್ಟಾಚಾರ ವಿರೋಧಿ ಕಾರ್ಯಕಾರಿ ಗುಂಪಿನ (ಎಸಿ

ಹೈದರಾಬಾದ್ : ವಿದೇಶಗಳಲ್ಲಿ ತಲೆಮರೆಸಿಕೊಂಡಿರುವ ಅಪರಾಧಿಗಳನ್ನು ಪತ್ತೆಹಚ್ಚಲು, ಹಸ್ತಾಂತರಿಸಲು, ಕದ್ದ ಆಸ್ತಿಯನ್ನು ಮರಳಿ ಪಡೆಯಲು ಹಾಗೂ ಹಣವನ್ನು ಅಕ್ರಮವಾಗಿ ಗಡಿಯಾಚೆಗೆ ಸಾಗಿಸುವುದನ್ನು ತಡೆಗಟ್ಟಲು ಎಲ್ಲ ದೇಶಗಳು ಸಹಕಾರ ನೀಡಬೇಕು ಎಂದು ಭಾರತ ಮನವಿ ಮಾಡಿದೆ.ಇಲ್ಲಿ ಮಂಗಳವಾರ ಆಯೋಜಿಸಿದ್ದ ಎರಡು ದಿನಗಳ ಬ್ರಿಕ್ಸ್ ಭ್ರಷ್ಟಾಚಾರ ವಿರೋಧಿ ಕಾರ್ಯಕಾರಿ ಗುಂಪಿನ (ಎಸಿಡಬ್ಲ್ಯುಜಿ) ಸಭೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಸಚಿವಾಲಯದ ಕಾರ್ಯದರ್ಶಿ ರಚನಾ ಶಾ ಮಾತನಾಡಿ, ‘ಸುಸ್ಥಿರ ಮತ್ತು ಅಂತರ್ಗತ ಅಭಿವೃದ್ಧಿಗೆ ಭ್ರಷ್ಟಾಚಾರವು ಪ್ರಮುಖ ಅಡ್ಡಿಯಾಗಿದೆ’ ಎಂದು ತಿಳಿಸಿದ್ದಾರೆ.‘ಭ್ರಷ್ಟಾಚಾರದಿಂದಾಗಿ ಸಾರ್ವಜನಿಕ ಸಂಪನ್ಮೂಲವು ಆಸ್ಪತ್ರೆ, ಶಾಲೆ ಸೇರಿದಂತೆ ಮೂಲಸೌಕರ್ಯಗಳಿಗೆ ಬಳಕೆಯಾಗದೆ ಪೋಲಾಗುತ್ತದೆ. ಇದರಿಂದ, ಸರ್ಕಾರದ ಮೇಲಿರುವ ಸಾರ್ವಜನಿಕರ ನಂಬಿಕೆಯೂ ಕುಸಿಯುತ್ತದೆ’ ಎಂದು ಹೇಳಿದ್ದಾರೆ.‘ಭ್ರಷ್ಟಾಚಾರದ ಸವಾಲಿನಿಂದ ಯಾವುದೇ ದೇಶವೂ ಮುಕ್ತವಾಗಿಲ್ಲ ಮತ್ತು ಇದನ್ನು ಏಕಾಂಗಿಯಾಗಿ ಜಯಿಸಲೂ ಸಾಧ್ಯವಿಲ್ಲ. ಹಣದ ಅಕ್ರಮ ಹರಿವನ್ನು ತಡೆಯಲು, ಸಾರ್ವಜನಿಕ ಸಂಪನ್ಮೂಲಗಳನ್ನು ರಕ್ಷಿಸಲು ಮತ್ತು ಅಂತರರಾಷ್ಟ್ರೀಯ ಭ್ರಷ್ಟಾಚಾರ ನಿಗ್ರಹ ವ್ಯವಸ್ಥೆಯನ್ನು ಬಲಪಡಿಸಲು ಸಾಮೂಹಿಕ, ಸಂಯೋಜಿತ ಮತ್ತು ಅಂತರರಾಷ್ಟ್ರೀಯ ಸಹಕಾರ ಅಗತ್ಯ’ ಎಂದು ತಿಳಿಸಿದ್ದಾರೆ.‘ಗಡಿಯಾಚೆಗಿನ ಭ್ರಷ್ಟಾಚಾರವನ್ನು ಮಟ್ಟಹಾಕಲು ಬ್ರಿಕ್ಸ್ ಸಹಕಾರ ನೀಡಬೇಕು’ ಎಂದು ಮನವಿ ಮಾಡಿದ್ದಾರೆ.ಪರಾರಿಯಾದ ಆರ್ಥಿಕ ಅಪರಾಧಿಗಳು ಒಡ್ಡುತ್ತಿರುವ ಸವಾಲನ್ನು ಎತ್ತಿ ತೋರಿಸಿದ ಶಾ, ‘ಅಪರಾಧದಿಂದ ಲಾಭ ಗಳಿಸುವ ವ್ಯಕ್ತಿಗಳಿಗೆ ಯಾವುದೇ ದೇಶ ಅಥವಾ ಪ್ರದೇಶವು ಸುರಕ್ಷಿತ ತಾಣವಾಗದಂತೆ ನೋಡಿಕೊಳ್ಳುವ ಅಗತ್ಯವಿದೆ’ ಎಂದು ಹೇಳಿದ್ದಾರೆ.