ಭಯೋತ್ಪಾದನೆ ನಿಲ್ಲಿಸಿದರೆ ಪಾಕ್ ಜತೆ ಸಂಬಂಧ: ಎಸ್. ಜೈಶಂಕರ್
ನವದೆಹಲಿ: ‘ಪಾಕಿಸ್ತಾನ ದೊಂದಿಗಿನ ಸಂಬಂಧಗಳು ಭಯೋತ್ಪಾದನೆ, ಹಗೆತನ ಮತ್ತು ಹಿಂಸಾಚಾರಮುಕ್ತ ವಾತಾವರಣದಲ್ಲಿಮಾತ್ರ ಮುಂದುವರಿಯಲು ಸಾಧ್ಯ. ಆದರೆ, ನೆರೆಯ ರಾಷ್ಟ್ರವು ಭಾರತದ ವಿರುದ್ಧ ಭಯೋತ್ಪಾದನೆಯನ್ನು ಸರ್ಕಾರದ ನೀತಿಯ ಸಾಧನವಾಗಿ ಬಳಸುತ್ತಲೇ ಇದೆ’ ಎಂದು ಕೇಂದ್ರ ಸರ್ಕಾರವು ಸಂಸತ್ಗೆ ಶುಕ್ರವಾರ ತಿಳಿಸಿದೆ.ಪುಲ್ವಾಮಾ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾ

ನವದೆಹಲಿ: ‘ಪಾಕಿಸ್ತಾನ ದೊಂದಿಗಿನ ಸಂಬಂಧಗಳು ಭಯೋತ್ಪಾದನೆ, ಹಗೆತನ ಮತ್ತು ಹಿಂಸಾಚಾರಮುಕ್ತ ವಾತಾವರಣದಲ್ಲಿಮಾತ್ರ ಮುಂದುವರಿಯಲು ಸಾಧ್ಯ. ಆದರೆ, ನೆರೆಯ ರಾಷ್ಟ್ರವು ಭಾರತದ ವಿರುದ್ಧ ಭಯೋತ್ಪಾದನೆಯನ್ನು ಸರ್ಕಾರದ ನೀತಿಯ ಸಾಧನವಾಗಿ ಬಳಸುತ್ತಲೇ ಇದೆ’ ಎಂದು ಕೇಂದ್ರ ಸರ್ಕಾರವು ಸಂಸತ್ಗೆ ಶುಕ್ರವಾರ ತಿಳಿಸಿದೆ.ಪುಲ್ವಾಮಾ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧಗಳ ಪ್ರಸ್ತುತ ಸ್ಥಿತಿ ಹಾಗೂ ಉಭಯ ದೇಶಗಳ ನಡುವಿನ ರಾಜಕೀಯ, ರಾಜತಾಂತ್ರಿಕ ಮತ್ತು ವ್ಯಾಪಾರ ಮಟ್ಟದಲ್ಲಿ ಆಗಿರುವ ಬದಲಾವಣೆಗಳ ಕುರಿತು ಸಮಾಜವಾದಿ ಪಕ್ಷದ ಸಂಸದ ಧರ್ಮೇಂದ್ರ ಯಾದವ್ ಅವರು ಕೇಳಿದ ಪ್ರಶ್ನೆಗೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಲಿಖಿತ ಉತ್ತರ ನೀಡಿದ್ದಾರೆ.‘2019ರ ಪುಲ್ವಾಮಾ ಭಯೋತ್ಪಾದನಾ ದಾಳಿಯ ನಂತರ, ಭಾರತವು ಪಾಕಿಸ್ತಾನಕ್ಕೆ ನೀಡಿದ್ದ ‘ಅತ್ಯಂತ ಪ್ರೀತಿಯ ದೇಶ’ (ಎಂಎಫ್ಎನ್) ಸ್ಥಾನಮಾನವನ್ನುಹಿಂಪಡೆಯಿತು. ಪಾಕಿಸ್ತಾನದಿಂದ ಆಮದಾಗುವ ಅಥವಾ ಅಲ್ಲಿಗೆ ರಫ್ತಾಗುವ ಎಲ್ಲ ಸರಕುಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇ 200ಕ್ಕೆ ಹೆಚ್ಚಿಸಿತ್ತು’ ಎಂದು ತಿಳಿಸಿದ್ದಾರೆ.‘ಇದಕ್ಕೆ ಪ್ರತಿಕ್ರಿಯೆಯಾಗಿ, ಪಾಕಿಸ್ತಾನವು ರಾಜತಾಂತ್ರಿಕ ಸಂಬಂಧಗಳು ಮತ್ತು ಭಾರತದೊಂದಿಗಿನ ದ್ವಿಪಕ್ಷೀಯ ವ್ಯಾಪಾರವನ್ನು ಸ್ಥಗಿತಗೊಳಿಸುವುದುಸೇರಿದಂತೆ ಕೆಲವು ಏಕಪಕ್ಷೀಯ ಕ್ರಮಗಳನ್ನು ಘೋಷಿಸಿತ್ತು’ ಎಂದು ಹೇಳಿದ್ದಾರೆ.‘2025ರ ಏಪ್ರಿಲ್ 22ರಂದು ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕರು ನಡೆಸಿದ ಪಹಲ್ಗಾಮ್ ಭಯೋತ್ಪಾದನಾ ದಾಳಿಗೆ ಪ್ರತಿಕ್ರಿಯೆಯಾಗಿ, ಭಾರತವು ಸಿಂಧೂ ನದಿ ನೀರು ಒಪ್ಪಂದವನ್ನು ಅಮಾನತಿನಲ್ಲಿಡುವುದು, ಅಟ್ಟಾರಿಯಲ್ಲಿನ ಚೆಕ್ಪೋಸ್ಟ್ ಮುಚ್ಚುವುದು, ವೀಸಾಗಳನ್ನು ನಿರ್ಬಂಧಿಸುವುದು ಮತ್ತು ಆಯಾ ರಾಯಭಾರ ಕಚೇರಿಗಳಲ್ಲಿ ರಾಜತಾಂತ್ರಿಕ ಮತ್ತು ಅಧಿಕೃತ ಸಿಬ್ಬಂದಿ ಸಂಖ್ಯೆಯನ್ನು ಕಡಿತಗೊಳಿಸುವುದು ಸೇರಿದಂತೆ ಹಲವು ರಾಜತಾಂತ್ರಿಕ ಕ್ರಮಗಳನ್ನು ಕೈಗೊಂಡಿತ್ತು’ ಎಂದು ಸಚಿವರು ತಿಳಿಸಿದ್ದಾರೆ.‘ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಜಮ್ಮು–ಕಾಶ್ಮೀರದಲ್ಲಿರುವ ಭಯೋತ್ಪಾದಕ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಸೇನಾ ಕ್ರಮವನ್ನು ಸಹ ಕೈಗೊಳ್ಳಲಾಗಿತ್ತು. ಪ್ರಸ್ತುತ, ಉಭಯ ದೇಶಗಳ ರಾಜಧಾನಿಗಳಲ್ಲಿ ರಾಜತಾಂತ್ರಿಕ ಕಾರ್ಯಾಚರಣೆಗಳು ಮುಂದುವರಿದಿವೆ’ ಎಂದು ಮಾಹಿತಿ ನೀಡಿದ್ದಾರೆ.‘ಗಡಿಯಾಚೆಗಿನ ಭಯೋತ್ಪಾದನೆಯನ್ನು ಭಾರತ ಎಂದಿಗೂ ಸಹಿಸುವುದಿಲ್ಲ. ಅದಕ್ಕೆ ತಕ್ಕ ತಿರುಗೇಟು ನೀಡುತ್ತದೆ. ನೆರೆಯ ದೇಶದೊಂದಿಗೆ ಭಾರತವು ಉತ್ತಮ ಸಂಬಂಧ ಹೊಂದಬೇಕಾದರೆ, ಮೊದಲು ಆ ದೇಶವು ಭಾರತದ ವಿರುದ್ಧ ನಡೆಸುವ ಭಯೋತ್ಪಾದನೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು’ ಎಂದು ತಿಳಿಸಿದ್ದಾರೆ.ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ260808-51-159440083