ಮಮತಾ ಬ್ಯಾನರ್ಜಿ ಕಾರಿನ ಮೇಲೆ ಕಲ್ಲು ತೂರಾಟ – ಕಿಟಕಿ ಹಾಕದೇ ಇದ್ದಿದ್ದರೆ ನಾನು ಸಾಯುತ್ತಿದ್ದೆ ಎಂದ ದೀದಿ
ಕೋಲ್ಕತ್ತಾ: ಪಶ್ಚಿಮ ಬಂಗಾಳದ (West Bengal) ಮಾಜಿ ಸಿಎಂ ಮಮತಾ ಬ್ಯಾನರ್ಜಿಯವರ (Mamata Banerjee) ಕಾರಿನ ಮೇಲೆ ದುಷ್ಕರ್ಮಿಗಳು ಇಟ್ಟಿಗೆ ಮತ್ತು ಕಲ್ಲುಗಳ ತೂರಾಟ ನಡೆಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮಮತಾ ಬ್ಯಾನರ್ಜಿಯವರು, ಇಲ್ಲಿಯವರೆಗೆ ನಾನು ಇಂತಹ ಭೀಕರ ದಾಳಿಯನ್ನು ಎದುರಿಸಿರಲಿಲ್ಲ. ಕಾರಿನ ಕಿಟಕಿಗಳನ್ನು ಮುಚ್ಚಿಲ್ಲದಿದ್ದರೆ, ಕಲ್ಲು ನನ್ನ ತಲೆಗೆ

ಕೋಲ್ಕತ್ತಾ: ಪಶ್ಚಿಮ ಬಂಗಾಳದ (West Bengal) ಮಾಜಿ ಸಿಎಂ ಮಮತಾ ಬ್ಯಾನರ್ಜಿಯವರ (Mamata Banerjee) ಕಾರಿನ ಮೇಲೆ ದುಷ್ಕರ್ಮಿಗಳು ಇಟ್ಟಿಗೆ ಮತ್ತು ಕಲ್ಲುಗಳ ತೂರಾಟ ನಡೆಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮಮತಾ ಬ್ಯಾನರ್ಜಿಯವರು, ಇಲ್ಲಿಯವರೆಗೆ ನಾನು ಇಂತಹ ಭೀಕರ ದಾಳಿಯನ್ನು ಎದುರಿಸಿರಲಿಲ್ಲ. ಕಾರಿನ ಕಿಟಕಿಗಳನ್ನು ಮುಚ್ಚಿಲ್ಲದಿದ್ದರೆ, ಕಲ್ಲು ನನ್ನ ತಲೆಗೆ ಬಿದ್ದು ಸಾಯುವ ಸಾಧ್ಯತೆ ಇತ್ತು ಎಂದು ಆತಂಕ ಹೊರಹಾಕಿದ್ದಾರೆ. ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟಿದ್ದಾರೆ ಎನ್ನಲಾದ ಪಕ್ಷದ (TMC) ಕಾರ್ಯಕರ್ತನ ಮನೆಗೆ ಮಮತಾ ಬ್ಯಾನರ್ಜಿಯವರು ತೆರಳುತ್ತಿದ್ದರು. ಈ ವೇಳೆ, ಹಲಿಸಹಾರ್ ಎಂಬಲ್ಲಿ ಅವರ ಕಾರನ್ನು ತಡೆದು ಜನ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ, ಕೆಲ ದುಷ್ಕರ್ಮಿಗಳು ಕಾರಿನ ಮೇಲೆ ಕೆಸರು ಸುರಿದು, ಶೂಗಳು ಮತ್ತು ನೀರಿನ ಬಾಟಲಿ, ಕಲ್ಲು, ಇಟ್ಟಿಗೆಗಳನ್ನು ಎಸೆದಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಪ್ರತಿಭಟನಾಕಾರರು “ಚೋರ್ ಭಾಗಾವೋ” ಎಂದು ಘೋಷಣೆ ಕೂಗಿದ್ದಾರೆ. ಪೊಲೀಸರು ಪ್ರತಿಭಟನಾಕಾರರನ್ನು ನಿಯಂತ್ರಿಸಲು ಹರಸಾಹಸಪಟ್ಟಿದ್ದಾರೆ. ಇದನ್ನೂ ಓದಿ: ಅಭಿಷೇಕ್ ಬ್ಯಾನರ್ಜಿ ಬಳಿಕ ಟಿಎಂಸಿ ಸಂಸದರ ಮೇಲೂ ದಾಳಿ – ಕಲ್ಯಾಣ್ ಬ್ಯಾನರ್ಜಿ ತಲೆಗೆ ಗಂಭೀರ ಪೆಟ್ಟು ಪೊಲೀಸರ ಮುಂದೆಯೇ ಕಿಡಿಗೇಡಿಗಳು ದಾಳಿ ನಡೆಸಿದ್ದಾರೆ. ಪೊಲೀಸರು ನಮ್ಮನ್ನು ರಕ್ಷಿಸಲು ಏನೂ ಮಾಡಲಿಲ್ಲ. ಅವರು ಬಿಜೆಪಿಗೆ ಮಾತ್ರ ರಕ್ಷಣೆ ನೀಡುತ್ತಾರೆ ಎಂದು ಅವರು ಕಿಡಿಕಾರಿದ್ದಾರೆ. ಮಮತಾ ಅವರ ಜೊತೆಗಿದ್ದ ಲೋಕಸಭಾ ಸಂಸದ ಕಲ್ಯಾಣ್ ಬ್ಯಾನರ್ಜಿ ಮತ್ತು ರಾಜ್ಯಸಭಾ ಸಂಸದ ಡೋಲಾ ಸೇನ್ ಕೂಡ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಸುವೇಂದು ಅಧಿಕಾರಿ ಪೊಲೀಸರನ್ನು ಬಳಸಿಕೊಂಡು ಈ ಕೃತ್ಯ ಎಸಗುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಈ ದಾಳಿಯ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯ ಬಿಜೆಪಿ ಮುಖ್ಯಸ್ಥ ಸಮಿಕ್ ಭಟ್ಟಾಚಾರ್ಯ, ದಾಳಿಯನ್ನು ಖಂಡಿಸಿದ್ದಾರೆ. ಈ ಘಟನೆಗೂ ಬಿಜೆಪಿಗೂ ಸಂಬಂಧವಿಲ್ಲ. ಪೊಲೀಸರು ಆ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟಿದ್ದಾರೆ ಎನ್ನಲಾದ ಮಾಜಿ ತೃಣಮೂಲ ಕೌನ್ಸಿಲರ್ ಅವರ ಪತಿ ಬಿರ್ಜು ಕಿಯೋಟ್ ಅವರ ಕುಟುಂಬದ ಭೇಟಿಗೆ ಮಮತಾ ಬ್ಯಾನರ್ಜಿ ಇಂದು ಬೆಳಿಗ್ಗೆ ಉತ್ತರ 24 ಪರಗಣ ಜಿಲ್ಲೆಗೆ ತೆರಳಿದ್ದರು. ಕಿಯೋಟ್ ಅವರನ್ನು ಸುಲಿಗೆ ಆರೋಪದ ಮೇಲೆ ಬಂಧಿಸಲಾಗಿತ್ತು. ಕಳೆದ ಶುಕ್ರವಾರ ನ್ಯಾಯಾಲಯವು ಐದು ದಿನಗಳ ಪೊಲೀಸ್ ಕಸ್ಟಡಿಗೆ ನೀಡಿತ್ತು. ಕಾಂಚ್ರಪಾರ ಪುರಸಭೆಯ ಮಾಜಿ ಕೌನ್ಸಿಲರ್ ಜೆನ್ನಿ ಶರ್ಮಾ, ತಮ್ಮ ಪತಿಯನ್ನು ಚಿತ್ರಹಿಂಸೆ ನೀಡಿ ಲಾಕಪ್ನಲ್ಲಿ ಹೊಡೆದು ಕೊಂದಿದ್ದಾರೆ ಎಂದು ಆರೋಪಿಸಿದ್ದಾರೆ. ಕಿಯೋಟ್ ಅವರ ಹೆಸರು ಎಫ್ಐಆರ್ನಲ್ಲಿ ಇಲ್ಲದಿದ್ದರೂ ಪೊಲೀಸರು ಅವರನ್ನು ಬಂಧಿಸಿದ್ದಾರೆ ಎಂದು ಸಂಸದ ಅಭಿಷೇಕ್ ಬ್ಯಾನರ್ಜಿ ಆರೋಪಿಸಿದ್ದಾರೆ. ಇದನ್ನೂ ಓದಿ: West Bengal Election| ಹಲವು ಮತಗಟ್ಟೆಗಳಲ್ಲಿ ಕಮಲದ ಬಟನ್ ಮೇಲೆ ಟೇಪ್ – ಮರುಮತದಾನಕ್ಕೆ ಬಿಜೆಪಿ ಆಗ್ರಹ